ಸ್ಪೀಡ್ಪೋಸ್ಟ್ ವಿಳಂಬವಾಗಿ ತಲುಪಿಸಿ ದಂಡತೆತ್ತ ಅಂಚೆ ಇಲಾಖೆ
ವಿದ್ಯಾರ್ಥಿನಿಯೊಬ್ಬಳ ಪ್ರವೇಶಪತ್ರವನ್ನು ತಡವಾಗಿ ತಲುಪಿಸಿ ಅವಳ ಒಂದು ಶೈಕ್ಷಣಿಕ ವರ್ಷವನ್ನು ವ್ಯರ್ಥಮಾಡಿದ್ದಕ್ಕಾಗಿ ಅಂಚೆ ಇಲಾಖೆಗೆ ರಾಷ್ಟ್ರೀಯ ಗ್ರಾಹಕ ಆಯೋಗವು 25 ಸಾವಿರ ರುಪಾಯಿ ದಂಡವನ್ನು ವಿಧಿಸಿದೆ.
ಈ ಪ್ರಕರಣ ನಡೆದದ್ದು ರಾಜಸ್ಥಾನದಲ್ಲಿ. ಅಲ್ಲಿಯ ಗರಿಮಾ ಗುಪ್ತಾ ನವೋದಯ ಶಾಲೆಗೆ ಕಳುಹಿಸಿದ್ದ ಪ್ರವೇಶ ಅರ್ಜಿಯನ್ನು ಅಂಚೆ ಇಲಾಖೆಯು ಏಳು ದಿನ ವಿಳಂಬವಾಗಿ ತಲುಪಿಸಿತ್ತು. ಇದನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗಿತ್ತು. ಹೀಗೆ ಕಳುಹಿಸಿದ ಪತ್ರವನ್ನು ಅಂಚೆ ಇಲಾಖೆಯು 24 ತಾಸುಗಳೊಳಗೆ ವಿಳಾಸದಾರರಿಗೆ ತಲುಪಿಸಬೇಕಿತ್ತು.
ರಾಜ್ಯ ಗ್ರಾಹಕ ಆಯೋಗವು ನೀಡಿದ್ದ ತೀರ್ಪಿನ ವಿರುದ್ಧ ಅಂಚೆ ಇಲಾಖೆಯು ಸಲ್ಲಿಸಿದ್ದ ಮೇಲ್ಮನವಿಯನ್ನು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ನಿವಾರಣೆ ಆಯೋಗವು ವಜಾಗೊಳಿಸಿದೆ. ವಿದ್ಯಾರ್ಥಿನಿಯ ಒಂದು ವರ್ಷವನ್ನು ಹಾಳುಮಾಡಿದ ಅಂಚೆ ಇಲಾಖೆಯು ತಾನು ಮಾಡಿದ ಪ್ರಮಾದಕ್ಕೆ 20 ಸಾವಿರ ರುಪಾಯಿಯನ್ನು ಪರಿಹಾರವಾಗಿ ನೀಡಬೇಕು ಮತ್ತು ವ್ಯಾಜ್ಯದ ವೆಚ್ಚವೆಂದು 5 ಸಾವಿರ ರುಪಾಯಿ ನೀಡಬೇಕು ಎಂದು ಆದೇಶಿಸಿದೆ.
ಅಂಚೆ ಇಲಾಖೆಯ ವಿಳಂಬದಿಂದಾಗಿ ವಿದ್ಯಾರ್ಥಿನಿಯು ತಾನು ಇಷ್ಟಪಟ್ಟ ಶಾಲೆಯಲ್ಲಿ ಪ್ರವೇಶ ಪಡೆಯುವುದು ಒಂದು ವರ್ಷ ವಿಳಂಬವಾಗಿದೆ. ಈಗ ಪರಿಹಾರವಾಗಿ ನೀಡುತ್ತಿರುವ 20 ಸಾವಿರ ರುಪಾಯಿ ಯಾವ ರೀತಿಯಿಂದ ನೋಡಿದರೂ ಅವಳಿಗಾಗಿರುವ ಹಾನಿಯ ಮುಂದೆ ದೊಡ್ಡ ಮೊತ್ತವಾಗಲಾರದು ಎಂದು ರಾಷ್ಟ್ರೀಯ ಆಯೋಗ ಹೇಳಿದೆ.ಆರಂಭದಲ್ಲಿ ಜಿಲ್ಲಾ ವೇದಿಕೆಯು ತೀರ್ಪು ನೀಡಿತ್ತು. ಅದನ್ನು ರಾಜ್ಯ ಆಯೋಗ ಎತ್ತಿಹಿಡಿದಿತ್ತು. ಅದನ್ನೇ ಈಗ ರಾಷ್ಟ್ರೀಯ ಆಯೋಗವೂ ದೃಢಪಡಿಸಿದೆ.
2012ರಲ್ಲಿ ಜಿಲ್ಲಾ ವೇದಿಕೆಯಲ್ಲಿ ಈ ಸಂಬಂಧ ವಿದ್ಯಾರ್ಥಿನಿಯ ತಂದೆ ಪ್ರಕರಣ ದಾಖಲಿಸಿದ್ದರು. ತಮ್ಮ ಮಗಳು ಜೈಪುರದ ಜವಾಹರ ನವೋದಯ ವಿದ್ಯಾಲಯದ ಅರ್ಜಿ ಫಾರ್ಮ್ಅನ್ನು ಸ್ಪೀಡ್ಪೋಸ್ಟ್ನಲ್ಲಿ ಕಳುಹಿಸಿದ್ದರು. 24 ತಾಸುಗಳೊಳಗೆ ತಲುಪುವುದೆಂದು ಅವರು ನಿರೀಕ್ಷೆ ಮಾಡಿದ್ದರು. ಅಂಚೆ ಇಲಾಖೆಯ ವಿಳಂಬದಿಂದಾಗಿ ತಮ್ಮ ಮಗಳ ಪ್ರವೇಶ ತಪ್ಪಿಹೋಗಿದ್ದರಿಂದ ಅವರು ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ಸೇವಾನ್ಯೂನತೆಯ ದೂರನ್ನು ಅಂಚೆ ಇಲಾಖೆ ವಿರುದ್ಧ ದಾಖಲಿಸಿದ್ದರು.
Comments
Post a Comment